ಮುಂಗಾರುಮಳೆ, ಗಾಳಿಪಟ ಚಿತ್ರಗಳ ನಂತರ ನಾವಿಬ್ಬರು ಮತ್ತೆ ಸಿನೆಮಾ ಮಾಡಲು ಎಷ್ಟೇ ಉತ್ಸುಕರಾಗಿದ್ದರೂ ಪ್ರತಿವರ್ಷ ಏನೋ ಒಂದು ಕಾರಣಕ್ಕೆ ಅದು ಸಾಧ್ಯವಾಗುತ್ತಿರಲಿಲ್ಲ. ಈಗ ಅವಕಾಶ ಹಾಗೂ ಸಮಯ ಎರಡೂ ನಮ್ಮಿಬ್ಬರಿಗೆ ಒದಗಿಬಂದಿದೆ. ಈ ಕಾರಣಕ್ಕೆ ನಾವಿಬ್ಬರೂ ಸಂತಸದಿಂದ ತಮ್ಮೆಲ್ಲರ ಜೊತೆಗೆ ಈ ಸುದ್ದಿ ಹಂಚಿಕೊಳ್ಳುತ್ತಿದ್ದೇವೆ.
ಅತ್ಯಂತ ಸರಳವೂ, ದಿನನಿತ್ಯದ ಬದುಕಲ್ಲಿ ಗೋಚರಿಸುವ ಹುಡುಗ-ಹುಡುಗಿಯರ ಭಾವನಾ ಪ್ರಪಂಚವೂ ಈ ಕಥಾನಕದಲ್ಲಿದೆ... ಇದೊಂದು ಒಬ್ಬ ಹುಡುಗನ ಜೀವನದ ಕಥೆ, ಆತನ ಜೀವನ, ವೃತ್ತಿ, ಪ್ರೀತಿ, ತಂದೆ-ತಾಯಿ, ಸಮಾಜ ಎಲ್ಲದರ “ಹೊಸ ಹೊಳಹು” ಇದರಲ್ಲಿದೆ. ಈ ಚಿತ್ರದ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ. ಆದ ತಕ್ಷಣ ತಿಳಿಸುತ್ತೇವೆ. ಸಂಗೀತ ವಿ. ಹರಿಕೃಷ್ಣ ಅವರದ್ದು. ಗೀತರಚನೆ ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಇಬ್ಬರದ್ದು. ಅಂತರಾಳಕ್ಕೆ ತಾಕುವಂಥ ಹೊಸ ರೀತಿಯ ಹಾಡುಗಳ ರಚನೆ, ಸಂಯೋಜನೆ ಜಾರಿಯಲ್ಲಿದೆ. ಸ್ಕ್ರಿಪ್ಟ್ ಬರವಣಿಗೆ ಭಾಗಶಃ ಮುಗಿದಿದೆ. ಚಿತ್ರದ ನಿರ್ಮಾಣವನ್ನು ಇಬ್ಬರೂ ಸೇರಿ ಮಾಡುತ್ತಿದ್ದೇವೆ. ಚಿತ್ರದ ಇತರೆ ತಾರಾಗಣ ಹಾಗೂ ತಂತ್ರಜ್ಞರ ವಿವರಗಳನ್ನು ಕೆಲವೇ ದಿನಗಳಲ್ಲಿ ನಿಮಗೆ ಹೇಳುತ್ತೇವೆ. ಚಿತ್ರೀಕರಣವು ಮೈಸೂರು ಹಾಗೂ ಕರ್ನಾಟಕದ ಇತರೆ ಹಲವಾರು ಜಿಲ್ಲೆಗಳಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ೨೫ರ ಅಕ್ಕಪಕ್ಕ ಶುರುವಾಗುವುದು.
ನಾಡಜನತೆ ಹಾಗೂ ಸಹೃದಯ ಮಾಧ್ಯಮ ಮಿತ್ರರೆಲ್ಲ ಪ್ರೀತಿ ತೋರಿ ಬೆಳೆಸಿದ ನಟ ಹಾಗೂ ತಂತ್ರಜ್ಞರು ನಾವು.